ವಿಜ್ಞಾನ ಮಾರ್ಗ, ವೈಜ್ಞಾನಿಕ ಮನೋಧರ್ಮ, ವೈಜ್ಞಾನಿಕತೆ ಮುಂತಾದ ವಿಷಯಗಳ ಕುರಿತು ನಾನು ಆಯೋಜಿಸುತ್ತಿದ್ದ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದವರು ಕೇಳುತ್ತಿದ್ದ ಸಾಮಾನ್ಯ ಪ್ರಶ್ನೆ ಇದು. ಅಂಥ ಸಂದರ್ಭಗಳಲ್ಲಿ ನಾನು ನೀಡುತ್ತಿದ್ದ ಸ್ಪಷ್ಟ ಉತ್ತರ ಇಂತಿರುತ್ತಿತ್ತು - ‘ಖಂಡಿತ ಇದೆ. ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕತೆ ಪರಸ್ಪರ ವೈರುಧ್ಯಗಳಲ್ಲ, ಪೂರಕಗಳು. ವೈಜ್ಞಾನಿಕತೆ ಕಂದಾಚರಗಳನ್ನೂ ಯಾಂತ್ರಿಕ ಮತೀಯ ಆಚರಣೆಗಳನ್ನೂ ವಿರೋಧಿಸುತ್ತದೆಯೇ ವಿನಾ ಪ್ರಾಮಾಣಿಕ ಸತ್ಯಾನ್ವೇಷಣೆಯನ್ನಲ್ಲ, ಪ್ರಾಮಾಣಿಕ ಸತ್ಯಾನ್ವೇಷಕರನ್ನಲ್ಲ. ವೈಜ್ಞಾನಿಕ ಮನೋಧರ್ಮದ ಪ್ರವರ್ತಕರು ಇಂದಿನ ‘ಸ್ವಘೋಷಿತ ಜಗದ್ಗುರುಗಳು’ ‘ಧರ್ಮ’ದ ಹೆಸರಿನಲ್ಲಿ ಪೋಷಿಸುತ್ತಿರುವ ಮೌಢ್ಯವನ್ನೂ ಕಂದಾಚರಣೆಗಳನ್ನೂ ಪ್ರದರ್ಶಿಸುತ್ತಿರುವ ‘ಪವಾಡ’ಗಳನ್ನೂ ವಿರೋಧಿಸುತ್ತಿದ್ದಾರೆಯೇ ವಿನಾ ರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ, ಗೌತಮಬುದ್ಧನ, ಬಸವಣ್ಣನವರ ಆಧ್ಯಾತ್ಮಿಕ ಚಿಂತನೆಗಳನ್ನಲ್ಲ.’
ನಾನು ನಂಬಿರುವ ‘ದೇವರು’ ಯಾವುದು? (ಗಮನಿಸಿ: ಯಾರು? ಅಲ್ಲ). ಹಾಲಿ ಅಸ್ಥಿತ್ವದಲ್ಲಿ ಇರುವ ವಿಶ್ವ ಯಾವುದರಿಂದ ಮೂಡಿ ಬಂದಿತೋ ಅದೇ ನಾನು ನಂಬುವ ‘ದೇವರು’. ನಾನು ನೋಡದೇ ಇದ್ದರೂ ಇದೆಯೆಯೆಂದು ನಂಬಿರುವ ‘ದೇವರ’ ಕಿರು ಪರಿಚಯ ಈಗ ಮಾಡಿಕೊಡುತ್ತೇನೆ. ಈ ದೇವರ ವೈಜ್ಞಾನಿಕ ಹೆಸರು ‘ವಿಚಿತ್ರತೆ’. ‘ವೈಚಿತ್ರ್ಯ’ ಎಂದು ಕರೆದರೂ ಆದೀತು. ‘Singularity’ ಎಂಬ ಇಂಗ್ಲಿಷ್ ಪದದ ಭಾಷಾಂತರ ಇದು (ನೋಡಿ: ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು). ಈ ದೇವರನ್ನು ಆವಿಷ್ಕರಿಸಿದವರು ವಿಶ್ವವಿಜ್ಞಾನಿಗಳು (Cosmologists). ನಮಗೆ ಈಗ ತಿಳಿದಿರುವ ಭೌತದ್ರವ್ಯದ (Matter) ಯಾವುದೇ ಸ್ಥಿತಿ ಅಲ್ಲದ್ದು, ನಮಗೆ ತಿಳಿದಿರುವ ಶಕ್ತಿಪ್ರಭೇದಗಳೂ ಅಲ್ಲದ್ದು, ನಮಗೆ ತಿಳಿದಿರುವ ನಾಲ್ಕು ಮೂಲಭೂತ ಭೌತಬಲಗಳು, ಅರ್ಥಾತ್, ಗುರುತ್ವಬಲ, ಪ್ರಬಲ ಬಲ, ದುರ್ಬಲ ಬಲ, ವಿದ್ಯುತ್ಕಾಂತೀಯ ಬಲ - ಇವು ತಮ್ಮ ಪ್ರತ್ಯೇಕ ಅಸ್ಥಿತ್ವ ಪ್ರದರ್ಶಿಸಲಾಗದ ರೀತಿಯಲ್ಲಿ ಒಗ್ಗೂಡಿ ಆಗಿರುವ ಯಾವುದೋ ಒಂದು ಅಜ್ಞಾತ ಬಲದಿಂದ (ಆದಿಬಲ?) ಕೂಡಿದ ಸ್ಥಿತಿಯೇ ಈ ‘ವಿಚಿತ್ರತೆ’. ಈ ಸ್ಥಿತಿಯಲ್ಲಿ ವ್ಯೋಮ (ಅಂತರಿಕ್ಷ/ಆಕಾಶ/ದೇಶ - Space) ಮತ್ತು ಕಾಲ ಸೊನ್ನೆ ಆಗುವುದರಿಂದ ಅರ್ಥಾತ್ ಇಲ್ಲವಾಗುವುದರಿಂದ (!) ಇದರ ಗಾತ್ರ ಊಹಿಸಲಾಗದಷ್ಟು ಚಿಕ್ಕ ಬಿಂದು ಅಥವ ಅಸತ್ ಎಂದು ಪರಿಗಣಿಸಬಹುದಾದ ಸೂಕ್ಷ್ಮಾತಿಸೂಕ್ಷ್ಮ ಕಣದಷ್ಟು ಇರುತ್ತದೆ. ಇದರ ಗಾತ್ರವನ್ನು ‘ಅಣೋರಣೀಯಮ್’ ಎಂದು ವರ್ಣಿಸಬಹುದು. ಅರ್ಥಾತ್, ಅದರ ಹೊರತಾಗಿ ಬೇರೇನೂ ಇರುವುದಿಲ್ಲ, ನಾವು ಇಂದು ‘ಖಾಲಿ ಸ್ಥಳ’ ಎಂದು ಏನನ್ನು ಉಲ್ಲೇಖಿಸುತ್ತೇವೋ ಅದೂ ಇರುವುದಿಲ್ಲ. ಅಂದ ಮೇಲೆ ಈ ‘ವಿಚಿತ್ರತೆ’ಯ ಸುತ್ತಲೂ ಏನಿತ್ತು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಲಿ ವಿಶ್ವದ ಸೃಷ್ಟಿಯಾಗುವ ಮುನ್ನ ಇದ್ದದ್ದು ಈ ‘ವಿಚಿತ್ರತೆ’ ಒಂದೇ. ಎಂದೇ, ಅದು ‘ವಿಚಿತ್ರತೆ’. ನಾವು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಲಾಗದ್ದು, ಅವರ್ಣನೀಯವಾದದ್ದು ಈ ‘ವಿಚಿತ್ರತೆ’. ಅನೂಹ್ಯ ಪರಿಮಾಣದ ತಾಪ ಮತ್ತು ಸಾಂದ್ರತೆ-ಇವೆರಡು ಮಾತ್ರ ಅದರ ಲಕ್ಷಣಗಳಿರಬಹುದೆಂದು ವಿಶ್ವವಿಜ್ಞಾನಿಗಳು ತರ್ಕಿಸಿದ್ದಾರಾದರೂ ಈ ಕುರಿತು ಖಚಿತವಾಗಿ ಹೇಳಲಾಗುವುದಿಲ್ಲ ಎಂಬುದು ನನ್ನ ಅಭಿಮತ. ನಮಗೆ ತಿಳಿದಿರುವ ಭೌತದ್ರವ್ಯಗಳಿಗೆ ಈ ಗುಣಧರ್ಮಗಳು ಅನ್ವಯಿಸುತ್ತವೆಯೇ ವಿನಾ ನಮಗೆ ತಿಳಿಯದಿರುವುದಕ್ಕೆ ಅಲ್ಲ ಎಂಬುದು ನನ್ನ ವಾದ. ಈಗ ಲಭ್ಯವಿರುವ ವೈಜ್ಞಾನಿಕ ಮಾಹಿತಿಯ ಪ್ರಕಾರ ಈ ‘ವಿಚಿತ್ರತೆ’ಯ ಹುಟ್ಟು-ಸಾವುಗಳ ಕುರಿತು ಏನೂ ತಿಳಿಯಲು ಸಾಧ್ಯವಾಗಿಲ್ಲ. ಎಂದೇ, ಹೊಸ ಮಾಹಿತಿ ಲಭ್ಯವಾಗುವ ತನಕ ಅದು ಅನಾದಿ, ಅನಂತ್ಯ, ಶಾಶ್ವತ ಎಂದು ಹೇಳಲು ನನ್ನ ಅಭ್ಯಂತರವಿಲ್ಲ. ಅಂದ ಮೇಲೆ, ಅದರ ಹುಟ್ಟು ಎಂದಾಯಿತು ಎಂದು ಕೇಳುವುದರಲ್ಲಾಗಲೀ, ಅದನ್ನು ‘ಸ್ವಯಂಭು’ ಎಂದು ವರ್ಣಿಸುವುದರಲ್ಲಾಗಲೀ ಅರ್ಥವಿಲ್ಲ. ಈಗ ಲಭ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಆಧರಿಸಿ ತೀರ್ಮಾನಿಸುವುದಾದರೆ, ಅದು ನಿತ್ಯ, ಶಾಶ್ವತ, ನಿರ್ಗುಣ, ನಿರಾಕಾರ, ಅಚಿಂತ್ಯ, ಅದೃಶ್ಯ, ಅಗ್ರಾಹ್ಯ, ಅಶರೀರಿ, ಸೂಕ್ಷ್ಮಾತಿಸೂಕ್ಷ್ಮ, ಇಂಥ ‘ವಿಚಿತ್ರತೆ’ಯಿಂದ ನಮ್ಮ ವಿಶ್ವ ಸುಮಾರು ೧೩.೭೫ ±೦.೧೧ ಬಿಲಿಯನ್ ವರ್ಷಗಳ ಹಿಂದೆ (೧ ಬಿಲಿಯನ್ = ೧೦೯ ವರ್ಷಗಳು) ಸೃಷ್ಟಿ ಆಯಿತು ಎಂದು ವಿಶ್ವವಿಜ್ಞಾನಿಗಳು ಅಂದಾಜಿಸಿದ್ದಾರೆ. ಎಂದೇ, ಈ ವಿಚಿತ್ರತೆಯನ್ನು ‘ದೇವರು’, ‘ಪರಬ್ರಹ್ಮ’ ಎಂದು ನಾನು ತಿಳಿಯುತ್ತೇನೆ.
ಸುಮಾರು ೧೩.೭೫ ±೦.೧೧ ಬಿಲಿಯನ್ ವರ್ಷಗಳ ಹಿಂದೆ ಯಾವುದೋ ಒಂದು ಸುಮುಹೂರ್ತದಲ್ಲಿ ‘ವಿಚಿತ್ರತೆ’ ಇದ್ದಕ್ಕಿದ್ದಂತೆ ಅನೂಹ್ಯ ವೇಗದಲ್ಲಿ ಉಬ್ಬಲಾರಂಭಿಸಿತಂತೆ (Inflate). ಈ ವಿದ್ಯಮಾನವನ್ನು ‘ಮಹಾಸ್ಫೋಟ (Big Bang)’ ಎಂದು ವಿಶ್ವವಿಜ್ಞಾನಿಗಳು ಉಲ್ಲೇಖಿಸುತ್ತಾರೆ. ‘ಮಹಾಸ್ಫೋಟ’ ಎಂಬ ಹೆಸರೇ ತಪ್ಪು ಎಂಬುದು ನನ್ನ ಅಭಿಪ್ರಾಯ. ಇಂದು ನಮಗೆ ತಿಳಿದಿರುವಂತೆ ಸ್ಫೋಟಗಳಾಗುವಾಗ ಕಿವಿಗಡಚಿಕ್ಕುವ ಶಬ್ದದೊಂದಿಗೆ ಬೃಹತ್ ಪರಿಮಾಣದಲ್ಲಿ ಉಷ್ಣಶಕ್ತಿ, ಹೊಗೆ ಇತ್ಯಾದಿಗಳೂ ಉತ್ಪತ್ತಿ ಆಗುತ್ತವೆ. ವಿಶ್ವದ ಹುಟ್ಟಿಗೆ ಕಾರಣವಾದ ‘ಮಹಾಸ್ಫೋಟ’ದಲ್ಲಿ ಇಂತಹುದೇನೂ ಆಗಲಿಲ್ಲ! ವಾಸ್ತವವಾಗಿ ‘ಮಹಾಸ್ಫೋಟ’ದ ನಂತರದ ೧೦-೪೩ ಸೆಕೆಂಡುಗಳಲ್ಲಿ ಏನು ಜರಗಿತೆಂಬುದು ಊಹಿಸಲೂ ಸಾಧ್ಯವಾಗಿಲ್ಲ. ತದನಂತರದ ವಿಶ್ವಸೃಷ್ಟಿಯ ಘಟನಾವಳಿಯ ಕಾಲರೇಖೆಯನ್ನು (ಟೈಮ್ ಲೈನ್) ವಿಶ್ವವಿಜ್ಞಾನಿಗಳು ನಿರ್ಮಿಸಿದ್ದಾರೆ. ಈ ಕುರಿತಾದ ಸಾಹಿತ್ಯ ಅಂತರ್ಜಾಲದಲ್ಲಿ ಸುಲಭಲಭ್ಯವಾದ್ದರಿಂದ ಇಲ್ಲಿ ಅದನ್ನು ತಿಳಿಸುವ ಶ್ರಮ ತೆಗೆದುಕೊಳ್ಳುವುದಿಲ್ಲ. ‘ಮಹಾಸ್ಫೋಟ’ದ ನಂತರದ ೩ ನಿಮಿಷಗಳ ಅವಧಿಯಲ್ಲಿ ಇಂದು ನಾವು ನೋಡುತ್ತಿರುವ, ವಾಸಿಸುತ್ತಿರುವ ವಿಶ್ವದ (ಸಕಲ ಜೀವರಾಶಿಯೂ ಸೇರಿದಂತೆ) ವಿಕಾಸಕ್ಕೆ ಅಗತ್ಯವಾದ ಎಲ್ಲ ಮೂಲದ್ರವ್ಯಗಳೂ, ಮೂಲಬಲಗಳೂ, ಶಕ್ತಿ ಪ್ರಭೇದಗಳೂ ಸೃಷ್ಟಿಯಾದವಂತೆ. ‘ಮಹಾಸ್ಫೋಟ’ದ ನಂತರದ ೧೦-೩೬ ರಿಂದ ೧೦-೩೨ ಸೆಕೆಂಡುಗಳ ಅವಧಿಯಲ್ಲಿ ಸೆಕೆಂಡುಗಳಲ್ಲಿ ಪ್ರೊಟಾನ್ ಗಾತ್ರದಷ್ಟಿದ್ದ ವಿಶ್ವ ದ್ರಾಕ್ಷಿ ಹಣ್ಣಿನ ಗಾತ್ರಕ್ಕೆ ಉಬ್ಬಿತಂತೆ (Inflate). ಅರ್ಥಾತ್, ಬೆಳಕಿನ ವೇಗವನ್ನು ಅನೇಕ ಪಟ್ಟು ಮೀರಿಸುವ ವೇಗದಲ್ಲಿ ಈ ಅವಧಿಯಲ್ಲಿ ವಿಶ್ವ ವಿಕಸಿಸಿದೆ. ಎಂದೇ, ವಿಶ್ವಸೃಷ್ಟಿಯ ಈ ವಾದಕ್ಕೆ (ಸಿದ್ಧಾಂತಕ್ಕೆ) ‘ಮಹಾಸ್ಫೋಟ ವಾದ’ ಎಂದು ಹೆಸರು. ಅಂದು ಆರಂಭವಾದ ವ್ಯಾಕೋಚನ (Expansion) ಇನ್ನೂ ಮುಂದುವರಿಯುತ್ತಿದೆ. ಆದ್ದರಿಂದಲೇ, ಹಾಲಿ ವಿಶ್ವವನ್ನು ‘ವ್ಯಾಕೋಚಿಸುತ್ತಿರುವ ವಿಶ್ವ’ ಎಂದು ಉಲ್ಲೇಖಿಸುವುದೂ ಉಂಟು. ಲಭ್ಯವಿರುವ ಮಾಹಿತಿಯನ್ನು ಆಧರಿಸಿ ರೂಪಿಸಿರುವುದರಿಂದಲೂ ಇದನ್ನು ಪುಷ್ಟೀಕರಿಸುವ ಹೊಸಹೊಸ ಸಾಕ್ಷ್ಯಾಧಾರಗಳು ದೊರೆಯುತ್ತಿರುವುದರಿಂದಲೂ ಇದರಿಂದ ನಿಗಮನ ಮಾಡಿದ ಕೆಲವು ಅಂಶಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಬಹುದಾದ್ದರಿಂದಲೂ ಬಹುತೇಕ ವಿಜ್ಞಾನಿಗಳು ಒಪ್ಪಿಕೊಂಡಿರುವ ವಾದ ಇದು.
ಅಸತ್ ಎಂದು ಪರಿಗಣಿಸಬಹುದಾದ ‘ವಿಚಿತ್ರತೆ’ ವ್ಯಾಕೋಚಿಸಿದರೆ ಸತ್ ಅನ್ನಬಹುದಾದ ವಿಶ್ವ (ಅರ್ಥಾತ್, ಭೌತದ್ರವ್ಯ, ಶಕ್ತಿ, ವ್ಯೋಮ, ಕಾಲ ಇತ್ಯಾದಿ) ಉತ್ಪತ್ತಿ ಆಗುತ್ತದೆ, ಸತ್ ಅನ್ನಬಹುದಾದ ವಿಶ್ವ ಪುನಃ ಸಂಕುಚಿಸಿದರೆ ತನ್ನ ಮೂಲಸ್ಥಿತಿ ‘ವಿಚಿತ್ರತೆ’ ಮರಳಿ ಅಸತ್ ಆಗುತ್ತದೆ ಎಂದು ಅರ್ಥೈಸಿದರೆ ತಪ್ಪಾಗುವುದಿಲ್ಲ. ವ್ಯಾಕೋಚಿಸುವಿಕೆ-ಸಂಕುಚಿಸುವಿಕೆ ‘ವಿಚಿತ್ರತೆ’ಯ ಅಂತಸ್ಥ ಸ್ವಭಾವ/ಧರ್ಮ(ವಿಶ್ವ ಇಂದಿನಂತೆ ನಿರಂತರವಾಗಿ ವ್ಯಾಕೋಚಿಸುತ್ತಲೇ ಇರುತ್ತದೆ ಎಂದು ವಾದಿಸುವವರೂ ಇದ್ದಾರೆ). ಈ ವ್ಯಾಕೋಚಿಸುವಿಕೆ- ಸಂಕುಚಿಸುವಿಕೆ ಚಕ್ರೀಯವಾಗಿ ನಮಗೆ ಇನ್ನೂ ತಿಳಿಯದ ಯಾವುದೋ ಅಂತಸ್ಥ ನಿಯಮಕ್ಕೆ ಒಳಪಟ್ಟು ಜರಗುತ್ತದೆಯೇ ವಿನಾ ಯಾದೃಚ್ಛಿಕವಾಗಿಯೇ ಆಗಲಿ ಅಥವ ‘ವಿಚಿತ್ರತೆ’ಯನ್ನು ಮೀರಿದ ಶಕ್ತಿಯೊಂದರ ಸಂಕಲ್ಪದಿಂದಾಗಿಯೇ ಆಗಲಿ ಅಲ್ಲ ಎಂಬುದು ನನ್ನ ಗುಮಾನಿ. ಬಹುಶಃ ಅದರ ಅಂತಸ್ಥ ನಿಯಮದನ್ವಯ ವರ್ತಿಸುವುದುರ ಹೊರತಾಗಿ ಅದು ಏನೂ ಮಾಡಲಾರದು. ಅಂತೆಯೇ, ವಿಶ್ವದಲ್ಲಿ ಜರಗುವ ಪ್ರತಿಯೊಂದು ವಿದ್ಯಮಾನವೂ ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿದ್ದ ಮೂಲ ನಿಯಮದ ಅನುನಿಯಮಗಳಿಗೆ ಅನುಗುಣವಾಗಿಯೇ ಜರಗುತ್ತದೆ ಎಂಬುದು ನನ್ನ ನಂಬಿಕೆ. ಆದ್ದರಿಂದ ನಾನು ನಂಬಿರುವ ‘ವಿಚಿತ್ರತೆ’ ದೇವರು ಬೇಕಾಬಿಟ್ಟಿಯಾಗಿ ಕಾರ್ಯಮಾಡುವಂತಿಲ್ಲ. ಅರ್ಥಾತ್, ಅದು ‘ಸರ್ವಶಕ್ತ’ವಲ್ಲ. ಎಂದೇ, ಅದನ್ನು ಓಲೈಸಲೂ ಸಾಧ್ಯವಿಲ್ಲ. ಅದು ಕರುಣಾಮಯಿಯೂ ಅಲ್ಲ, ನಿರ್ದಯಿಯೂ ಅಲ್ಲ. ಅರ್ಥಾತ್, ಜೀವಿಸಹಜವಾದ ಸಂವೇದನೆಗಳೇ ಆಗಲಿ, ಭಾವೋದ್ವೇಗಳೇ ಆಗಲಿ, ಜನನ-ಮರಣಗಳೇ ಆಗಲಿ ಇಲ್ಲದಿರುವ ಸ್ಥಿತಿ ಈ ‘ವಿಚಿತ್ರತೆ’. ಎಂದೇ, ಅದು ನಿರ್ವಿಕಾರ.
ಈ ವಿಶ್ವದಲ್ಲಿ ಇರುವುದೆಲ್ಲವೂ ನಾನು ನಂಬಿರುವ ‘ವಿಚಿತ್ರತೆ’ ದೇವರಿಂದಲೇ ಉತ್ಪತ್ತಿ ಆಗಿ ಅದರೊಳಗೇ ಇವೆ. ಅಂದ ಮೇಲೆ, ವಿಕಸಿತ ‘ವಿಚಿತ್ರತೆ’ಯೇ ವಿಶ್ವ ಎಂದು ಹೇಳಬಹುದಲ್ಲವೇ?. ಅರ್ಥಾತ್ ಹಾಲಿ ವಿಶ್ವದಲ್ಲಿ ಇರುವ ಎಲ್ಲವನ್ನು ವಿಘಟಿಸಿದರೆ ದೊರೆಯುವುದು ‘ವಿಚಿತ್ರತೆ’ಯಲ್ಲಿ ಏನಿತ್ತೋ ಅದೇ ಆಗಿರುತ್ತದೆ. ವಿಶ್ವಸೃಷ್ಟಿಗಿಂತ ಮುನ್ನ ‘ವಿಚಿತ್ರತೆ’ಯ ಹೊರತಾಗಿ ಬೇರೇನೂ ಇರಲಿಲ್ಲ ಎಂದೂ ಅದು ವ್ಯಾಕೋಚಿಸುವಾಗ ‘ವಿಚಿತ್ರತೆ’ಯಲ್ಲಿ ಏನಿತ್ತೋ ಅದರಿಂದಲೇ ಇವೆಲ್ಲವೂ ಉತ್ಪತ್ತಿ ಆಗಿದೆಯೆಂದು ಈ ಮುನ್ನವೇ ವಿವರಿಸಿದ್ದೇನೆ. ಅರ್ಥಾತ್, ಈಗಲೂ ವಿಶ್ವ ಎಲ್ಲಿಯ ವರೆಗೆ ವಿಸ್ತರಿಸಿದೆ? ಅದರ ಎಲ್ಲೆ ಎಲ್ಲಿದೆ? ಅದರಿಂದಾಚೆ ಏನಿದೆ? ಮುಂತಾದ ಪ್ರಶ್ನೆಗಳೇ ಅರ್ಥವಿಹೀನವಾದವು. ಇರುವುದೆಲ್ಲವೂ ವಿಶ್ವವೇ. ವಿಶ್ವದ ಹೊರತಾಗಿ ಬೇರೇನೂ ಇಲ್ಲ. ಅರ್ಥಾತ್, ‘ವಿಚಿತ್ರತೆ’ ಸರ್ವವ್ಯಾಪಿಯೂ ಸರ್ವಾಂತರ್ಯಾಮಿಯೂ ಆಗಿದೆ. ಈ ವಿಶ್ವದ ಗಾತ್ರ ಅನೂಹ್ಯ, ಆದ್ದರಿಂದ ಸಧ್ಯಕ್ಕೆ ನನ್ನ ‘ವಿಚಿತ್ರತೆ’ ದೇವರನ್ನು ಮಹತೋಮಹೀಯಾನ್ ಎಂದು ವರ್ಣಿಸಬಹುದು. [Pascal: “The whole visible world is only an imperceptible atom in the ample bosom of nature. No idea approaches it. We may enlarge our conceptions beyond all imaginable space; we only produce atoms in comparison with the reality of things. It is an infinite sphere, the centre of which is everywhere, the circumference nowhere. In short, it is the greatest sensible mark of the almighty power of God that imagination loses itself in that thought.”]
ವಿಶ್ವದಲ್ಲಿ ಜರಗುವ ಪ್ರತಿಯೊಂದು ವಿದ್ಯಮಾನವೂ ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿದ್ದ ಮೂಲ ನಿಯಮದ ಮತ್ತು ಅದರ ಅನುನಿಯಮಗಳಿಗೆ ಅನುಗುಣವಾಗಿಯೇ ಜರಗುತ್ತದೆ ಎಂಬುದು ನನ್ನ ನಂಬಿಕೆ ೆಂದು ಈಗಾಗಲೇ ಘೋಷಿಸಿದ್ದೇನೆ. ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’ ಎಂಬುದು ನನ್ನ ನಿಲುವು. ದುರದೃಷ್ಟವಶಾತ್, ಆಧುನಿಕ ವಿಜ್ಞಾನ ಭೌತಿಕ ಜಗತ್ತಿನ ಆಗುಹೋಗುಗಳ ನಿರ್ಧಾರಕ ನಿಯಮಗಳ ಹಾಗೂ ತತ್ಸಂಬಂಧಿತ ಸಿದ್ಧಾಂತಗಳ ಮೇಲೆ ಮಾತ್ರ ತನ್ನ ಗಮನವನ್ನು ಆಧುನಿಕ ವಿಜ್ಞಾನ ಕೇಂದ್ರೀಕರಿಸಿದೆ. ಜೀವಿವರ್ತನೆಯ ನಿರ್ಧಾರಕ ನಿಯಮಗಳನ್ನು ಉಪೇಕ್ಷಿಸಿದೆ. ದಾರ್ಶನಿಕರು ‘ಧರ್ಮ’ಕ್ಕೆ ನೀಡಿರುವ ವ್ಯಾಖ್ಯಾನಗಳು ‘ಶ್ರೀಸಾಮಾನ್ಯನಿಗೆ’ ಅರ್ಥವಾಗುವ ವಾಕ್ಯಗಳಲ್ಲಿ ಇಲ್ಲವಾದ್ದರಿಂದ (ಉದಾ: ೧. “ಯಾವುದು ಮಾತಿನಿಂದ ವ್ಯಕ್ತವಾಗುವುದಿಲ್ಲವೋ ಯಾವುದರಿಂದ ಮಾತು ವ್ಯಕ್ತವಾಗುವುದೋ ಅದು ಬ್ರಹ್ಮವೆಂದು ತಿಳಿ” -----. ೨. “ಅರಿತುಕೊಂಡಿಲ್ಲ ಎಂದು ಭಾವಿಸುವುದಿಲ್ಲ, ಅರಿತೂ ಇದ್ದೇನೆ ಎಂದು ನಮ್ಮಲ್ಲಿ ಯಾರು ಬಲ್ಲರೋ ಅವರೇ ಬಲ್ಲರು”. ೩. “ಯಾರಿಗೆ ತಿಳಿವಳಿಕೆ ಇಲ್ಲವೋ ಅವನಿಗೆ ತಿಳಿದಿದೆ. ಐಆರಿಗೆ ತಿಳಿವಳಿಕೆ ಇದೆಯೋ ಅವನಿಗೆ ತಿಳಿದಿಲ್ಲ. ತಿಳಿದವರಿಗೆ ತಿಳಿಯದೇ ಇದೆ. ತಿಳಿಯದವರಿಗೆ ತಿಳಿದಿದೆ. ೪. ಯಾವುದನ್ನು ಇದೆಂದು ಉಪಾಸನೆ ಮಾಡುತ್ತಾರೆಯೋ ಇದು ಬ್ರಹ್ಮವಲ್ಲ) ‘ಧರ್ಮ’ವನ್ನು ಅರ್ಥೈಸುವದನ್ನೇ ಜೀವನೋಪಾಯವಾಗಿ ಮಾಡಿಕೊಂಡು ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಏನು ಮಾಡಬೇಕೋ ಅದನ್ನೇ ಮಾಡುವವರ ಮತ್ತು ‘ದೇವರನ್ನು’ ಓಲೈಸಲು ನೆರವು ನೀಡುವುದನ್ನೇ ಜೀವನೋಪಾಯವಾಗಿ ಮಾಡಿಕೊಂಡು ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಏನು ಮಾಡಬೇಕೋ ಅದನ್ನೇ ಮಾಡುವವರ ವರ್ಗಗಳೇ ಸೃಷ್ಟಿಯಾಗಿವೆ.
“ಅಲ್ಲಿಗೆ ಕಣ್ಣು ಹೋಗುವುದಿಲ್ಲ, ವಾಕ್ಕು ಹೋಗುವುದಿಲ್ಲ, ಮನಸ್ಸು ಹೋಗುವುದಿಲ್ಲ, ನಾವು ಅರಿಯೆವು, ಇದನ್ನು ಹೇಗೆ ಕಲಿಸಿಕೊಡಬೇಕೋ ಅರಿಯೆವು” ಎಂದು ಕೇನೋಪನಿಷತ್ತಿನಲ್ಲಿ ಹೇಳಿರುವುದು ಪ್ರಾಮಾಣಿಕ ಹೇಳಿಕೆ. ಎಂದೇ, ಸ್ವಯಂ ಅಧ್ಯಯನದಿಂದ (ಇದನ್ನು ತಿಳಿದ ಗುರುಗಳು ಸೂಕ್ಷ್ಮದರ್ಶಕದ ನೆರವಿನಿಂದ ಹುಡುಕಿದರೂ ಇಂದು ಸುಲಭಲಭ್ಯರಲ್ಲದಿರುವುದರಿಂದ), ಅಧ್ಯಯಿಸಿದ್ದನ್ನು ಮನನ-ಮಂಥನ ಪ್ರಕ್ರಿಯೆಗೆ ಒಳಪಡಿಸುವುದರಿಂದ ‘ಇದರ’ ಮತ್ತು ನಮ್ಮ ಬದುಕಿಗೆ ಮಾರ್ಗದರ್ಶನ ಮಾಡಬಲ್ಲ ‘ಧರ್ಮ’ದ ಅಸ್ಪಷ್ಟ ಪರಿಕಲ್ಪನೆ ರೂಪುಗೊಳ್ಳುವ ಸಾಧ್ಯತೆ ಇದೆಯೇ ವಿನಾ ಕೇವಲ ಬೂಟಾಟಿಕೆಯ ಸತ್ಸಂಗದಿಂದ ಅಥವ ಪುಸ್ತಕದ ಓದು ಮತ್ತು ಯಾಂತ್ರಿಕ ಮತಾಚರಣೆಗಳನ್ನು ಮಾಡುವುದರ ಮುಖೇನ ‘ದೈವಕೃಪೆ’ ಗಿಟ್ಟಿಸಿಕೊಡುವ ದಂಧೆಯವರ ನೆರವಿನಿಂದಲ್ಲ ಎಂಬುದು ನನ್ನ ನಿಲುವು.
ಕೊಸರು: ನಿಮ್ಮ ಭವಿಷ್ಯವನ್ನು ನಿರ್ಧರಿಸುವವರು ನೀವೇ, ದೇವರಲ್ಲ. ಇಂದು ನೀವೇನಾಗಿದ್ದೀರೋ ಅದಕ್ಕೆ ಕಾರಣರೂ ನೀವೇ, ದೇವರಲ್ಲ.
1 comment:
ದೇವರು, ಧರ್ಮ, ನಂಬಿಕೆ ಇದು ತುಂಬಾ ಹಳೆಯ ಚರ್ಚೆ. ಇದರಲ್ಲಿ ಗೆದ್ದವರಾರೂ ಇಲ್ಲ. ನಾವೆಲ್ಲರೂ ನಂಬುವುದು ನಮನಮಗೆ ಸಾಕ್ಷಾತ್ಕಾರವಾಗಿದ್ದನ್ನು. ಅದೇ ಎಲ್ಲರ ದೇವರು. ಎಲ್ಲರ ವಿಚಾರಗಳು ಒಂದೇ ಆಗಲು ಸಾಧ್ಯವಿಲ್ಲ. ಆದರೆ ಈ ಜಗತ್ತಿನಲ್ಲಿ ವೈವಿಧ್ಯತೆ ಇರುವುದಿಲ್ಲ. ಈ ವಿಶ್ವದ ಉದಯದ ಬಗ್ಗೆ ಮಿಲಿಯಗಟ್ಟಲೆ ವೆರ್ಷಗಳ ಹಿಂದಿನ ಕಥೆ ಕೇವಲ ಯಾವುದೋ ಒಂದು ತರ್ಕದ ಮೇಲೆ ನಿಂತಿದೆ. ವಿಜ್ಞಾನದಲ್ಲೂ ಇವತ್ತು ಸತ್ಯವೆನಿಸಿದ್ದು ನಾಳೆ ಸುಳ್ಳಾದ ನಿದರ್ಶನಗಳಿವೆ. ಆದರೂ ಸುಮ್ಮನೆ ಏನನ್ನೋ ನಂಬುವುದಕ್ಕಿಂತ ತರ್ಕ ಆಧರಿತವನ್ನು ನಂಬುವುದು ಸರಿಯೆನಿಸುತ್ತದೆ. ದಿನಕರ ದೇಸಾಯಿಯವರ ಯಾವುದೋ ಚುಟುಕ ಓದಿದ ನೆನಪು - ಚಂದ್ರ ಕವಿಗೆ ಹೆಂಡತಿಯ ಮೋರೆಯಂತೆ, ಮಗುವಿಗೆ ಚೆಂಡಿನಂತೆ, ವಿಜ್ಞಾನಿಗೆ ಬರಿಯ ಕಲ್ಲು ಗುಂಡಿನಂತೆ ತೋರುವುದಂತೆ. ಎಲ್ಲರೂ ನಂಬುವುದು ಆ ವಿಚಿತ್ರತೆಯನ್ನೇ. ಏನೇನೋ ರೂಪ, ಏನೇನೋ ಹೆಸರು.
Post a Comment